Monthly Archives: July 2011

ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ….?

ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸುವುದು ನಮ್ಮ ಶಿಕ್ಷಣ ಕ್ಷೇತ್ರವನ್ನು ಬಾಧಿಸುತ್ತಿರುವ ಮಾರಕ ರೋಗ. ಇದನ್ನು ನೋಡುತ್ತಿದ್ದರೆ ನಾವು ನಮ್ಮ ದೇಶವನ್ನು ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂಬ ಸಂಶಯ ಬರುತ್ತದೆ….ನಮಗೆ ಚಿಂತನೆ  ಮತ್ತು ಆಲೋಚನೆಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ. ಎಂದು ನಾವೇ ನಿರ್ಧರಿಸಿಬಿಟ್ಟಿದ್ದೇವೆ. ಜೊತೆಗೆ ಶಿಕ್ಷಣವನ್ನೂ ಒಂದು ಲಾಭದಾಯಕ ಉದ್ಯಮವೆಂದು ಭಾವಿಸುವವರಿಗೆ ಈ ವಿಷಯ ವಿಶ್ವವಿದ್ಯಾಲಯಗಳು ಗಳಿಕೆ ಯ ಮಾರ್ಗವೂ ಆಗಿಬಟ್ಟಿವೆ….
ಎಂದಿದ್ದಾರೆ ಹಿರಿಯ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊ.ಯಶ್ ಪಾಲ್. (ಪ್ರ.ವಾಣಿ)

ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಗೇ ವಿರುದ್ಧವಾಗಿರುವ  ಈ “ವಿಷಯ ವಿಶ್ವವಿದ್ಯಾಲಯಗಳು” ವಿಶ್ವವಿದ್ಯಾಲಯಗಳನ್ನು ಕೇವಲ ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸಿಬಿಡುತ್ತವೆ. ಅಂದರೆ ವಿಶ್ವವಿದ್ಯಾಲಯಗಳು ವಿಶಾಲ ಮನೋಭಾವದ ಪಾಂಡಿತ್ಯವುಳ್ಳ ನಾಗರೀಕರನ್ನು ಸೃಷ್ಟಿಸುವ ಕೆಲಸವನ್ನೂ ನಿಲ್ಲಿಸಿಬಿಡುತ್ತವೆ….ಯಾಕೆಂದರೆ, ನಮ್ಮ ಸರ್ಕಾರಕ್ಕೆ ಬೇಕಿರುವುದು ತನ್ನ ಗೊಡ್ಡು ಚಿಂತನೆಗಳನ್ನು ಪ್ರಶ್ನಿಸದ ನಾಗರಿಕ ಸಮಾಜವಷ್ಟೇ… ಇದು ಬಡವರನ್ನು ಉನ್ನತ ಶಿಕ್ಷಣದಿಂದ ಹೊರಗಿಡುವ ಕ್ರಿಯೆಯೂ ಆಗಿಬಿಡುತ್ತದೆ.. ಆದ್ದರಿಂದ ವಿಷಯ ವಿದ್ಯಾಲಯಗಳ ಸ್ಥಾಪನೆ ಒಂದು ಅಪ್ರಜಾಸತ್ತಾತ್ಮಕ ನೀತಿ.
-ಎಂದಿದ್ದಾರೆ ಕೇರಳ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಾದ ಡಾ.ಕೆ.ಎನ್.ಪಣಿಕ್ಕರ್. (ಪ್ರ.ವಾಣಿ)

ಮೇಲೆ ತಿಳಿಸಿದ ಹಿರಿಯ ಶಿಕ್ಷಣ ತಜ್ಞರೂ ಮೇಧಾವಿಗಳ ಮಾತನ್ನು ನಮ್ಮ ಇಂದಿನ ಶಿಕ್ಷಣತಜ್ಞರು ಮತ್ತು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ಮುಂದೊಂದು ದಿನ ಜ್ಞಾನ ದೇಗುಲ ಗಳೆಂದು ಕರೆಸಿಕೊಳ್ಳುವ, ನಮ್ಮ ಮುಂದಿನ ಪೀಳಿಗೆ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳೂ ಕೇವಲ “ಇಂಡಸ್ಟ್ರಿ” (ಕಾರ್ಖಾನೆ) ಗಳಾಗಿ ಬಿಡುತ್ತವೆಯಷ್ಟೇ. ಬಡವರಿಗೆ ಉನ್ನತ ಶಿಕ್ಷಣವೆಂಬುದು ಮರೀಚಿಕೆಯಾಗುತ್ತದೆ.  ಅಂತಹ ಸಾಮಾಜವಾದ ವಿರೋಧಿ ನೀತಿಯಿಂದ  ಅಪಾಯ ಬರದಿರುವಂತೆ ಸಂಬಂಧಪಟ್ಟ ಗಣ್ಯರು ಶಿಕ್ಷಣತಜ್ಞರೂ ಸೂಕ್ತ ಕ್ರಮ ತಡೆಯಾಜ್ಞೆಗಳತ್ತ ಗಮನ ಹರಿಸಬೇಕಲ್ಲವೇ…?

 

ತಪ್ಪಾಯ್ತು ಅಂತಾ… ತಿದ್ದಿಕೋಳ್ತಾರಾ..?. ಮತ್ತೆ ಮಬ್ ನಲ್ಲಿ ತಬ್ಬಿಕೊಳ್ಳದೇನೆ ಇರ್ತಾರಾ…..

ತಪ್ಪು ಯಾರು ಮಾಡಲ್ಲ..? ತಪ್ಪು ಎಲ್ಲರೂ ಮಾಡುತ್ತಾರೆ. ಮನುಷ್ಯ ಅಂದ್ಮೇಲೆ ತಪ್ಪು ಮಾಡದೇ ಇರಲಿಕ್ಕೆ ಆಗುತ್ತೇನು!  ಅಷ್ಟಕ್ಕೂ ತಪ್ಪು ಮಾಡದೇನೆ ಯಾರೂ ದೊಡ್ಡವರಾಗಿಲ್ಲ. ಪ್ರತಿಭಾವಂತ ಪಂಡಿತರ ತಪ್ಪುಗಳೂ ಹೊಸ ಶೋಧಕ್ಕೆ ಹೊಳಹು ನೀಡುತ್ತವೆ. ಎಂತಹ ಮಹಾನ್ ಮೇಧಾವಿಗಳೂ, ವಿಜ್ಞಾನಿಗಳೂ ತಪ್ಪು ಮಾಡಿಯೇ ಯಶಸ್ಸು ಕಂಡವರಿದ್ದಾರೆ. ಅವರ ಯಶಸ್ಸಿನ ಗುಟ್ಟೆಂದರೆ ಮಾಡಿದ ತಪ್ಪನ್ನು ಪುನಃ ಮಾಡದೇ ಇರುವುದು. ಗಾಂಧೀಜಿ ಮಹಾತ್ಮರಾದದ್ದೂ ಹಾಗೆಯೇ.  ಇದೆಲ್ಲ ಗೊತ್ತಿರೋದೇ. ತಪ್ಪು ಆದರಾಯಿತು  ಒಂದು ಕೈ ನೋಡಿಯೇ ಬಿಡೋಣ..  ಎಂದು ನಿರ್ಲಕ್ಷಿಸಿ ನಡೆಯುವವರೂ ಇದ್ದೇವೆ. ಆದರೇನು, ತಪ್ಪು ತಪ್ಪೇ ಅದರ ಪರಿಣಾಮ ಅನುಭವಿಸಬೇಕಾದ್ದೇ. ಆದ್ದರಿಂದ, ಮಾಡಿದ ತಪ್ಪನ್ನೇ ಮಾಡದಿರುವುದು ಬುದ್ದಿವಂತಿಕೆಯ ಲಕ್ಷಣ.
*****  ***** *****
ನಮ್ಮ ಆರೋಗ್ಯದ ವಿಷಯಕ್ಕೆ ಬಂದಾಗಲಂತೂ, ನಾವು  ತಪ್ಪು ಮಾಡುತ್ತಲೇ ಬಂದಿದ್ದೇವೆ ಎನಿಸುತ್ತದೆ. ಇಂದಿನ ಯುವ ಪೀಳಿಗೆಯವರನ್ನು ನೋಡಿದಾಗ ಹಾಗೆ ಖಂಡಿತ ಅನಿಸದೇ ಇರದು. ಲೈಫ್ ಸ್ಟೈಲ್ ವಿಷಯದಲ್ಲಿ ನಾವು ಇಂದಿನ ಯುವ ಪೀಳಿಗೆಯವರಿಗಿಂತಲೂ (ಕೆಲವರು exceptionally good) ಎಷ್ಟೋ ವಾಸಿ ಎನಿಸುತ್ತದೆಯಲ್ಲವೇ..?  ಏನೇ ಹೇಳಿ ನಮ್ಮ ದೇಹವನ್ನು ಅನಗತ್ಯವಾಗಿ ದಂಡಿಸಿ ಆರೋಗ್ಯಕ್ಕೆ ಹಾನಿ ಮಾಡಿಕೊಂಡಿದ್ದೇವೆಂಬುದು ವಯಸ್ಸಾಗುತ್ತಾ ಹೋದಂತೆ ತಿಳಿಯದೇ ಇರುವುದಿಲ್ಲ.

ತಿಳಿದರೂ ಎಚ್ಚೆತ್ತುಕೊಳ್ಳವುದೂ ಮತ್ತೆ ಮತ್ತೆ ಮನೋ ದೌರ್ಬಲ್ಯ ಜಿಹ್ವಾ ಚಾಪಲ್ಯಕ್ಕೊಳಗಾಗಿ ತಿನ್ನಬಾರದನ್ನ ತಿಂದು ಆಮೇಲೆ ಚಡಪಡಿಸುವುದೂ  ಮಾತ್ರೆಗಳನ್ನು ನುಂಗುವುದೂ ಇದೆಯಲ್ಲ.  ಅಷ್ಟಕ್ಕೂ ಇಳಿವಯಸ್ಸೇ ಹಾಗೆ ಅನ್ನಿ. ನಾವು ಮನಸ್ಸು ಮಾಡಿದರೂ ಶರೀರ ಪ್ರಕೃತಿ ಇಂದು ಇದ್ದಂತೆ ನಾಳೆ ಇರುವುದಿಲ್ಲವಾದ್ದರಿಂದ ಸಮತೂಕದ ಆಹಾರ ಪದ್ಧತಿ ಅನುಸರಿಸುವುದು ಅಷ್ಟು ಸುಲಭವೇನಲ್ಲ. ಎಲ್ಲದಕ್ಕೂ “ಲಂಘನಂ ಪರಮ ಔಷಧಂ” ಎಂಬಂತೆ  ಇಳಿವಯಸ್ಸಿನಲ್ಲಿ ಔಷಧಿಗಳಿಗಿಂತಲೂ ಮಿತ  ಆಹಾರ ಸೇವಿಸುವುದು (ರಾತ್ರಿ ಹೊತ್ತು ಹಣ್ಣಗಳನ್ನಷ್ಟೆ   ಸೇವಿಸುವುದು,  ಒಮ್ಮೊಮ್ಮೆ  ಲಘ ಉಪಹಾರ ತೆಗೆದುಕೊಳ್ಳುವುದು ಉತ್ತಮ.  ಅಲ್ಲದೇ ವಾರಕ್ಕೊಮ್ಮೆ ಉಪವಾಸ ಮಾಡುವುದೇ ಶ್ರೇಯಸ್ಕರವೆನಿಸುತ್ತದೆ.  ಇದು ನಮ್ಮಂಥ ಜನಸಾಮಾನ್ಯರ ಆರೋಗ್ಯವ ವಿಷಯಕ್ಕಷ್ಟೇ ಸಂಬಂಧಿಸಿದ್ದೂ ಅನ್ನಿ.  ಏನೇ ಆಗಲಿ, ಕಡುಬಡವರಿಗೆ, ಮಧ್ಯಮವರ್ಗದವರಿಗೆ, ಮೇಲ್ಮಟ್ಟದ ಮಧ್ಯಮ ವರ್ಗದವರಿಗೂ ಸಹ ದೇವರು ಒಳ್ಳೇ ಆರೋಗ್ಯಕೊಟ್ಟಿದ್ದರೆ, ಅವರೇ ಪುಣ್ಯವಂತರು ಬಿಡಿ. ಒಂದುವೇಳೆ  ತಪ್ಪು ಮಾಡ್ತಾನೆ; ತಿದ್ದಿಕೊಳ್ಳುವುದನ್ನೂ ಮಾಡ್ತಾನೆ ಇರ್ತಾರೆ. ಯಾವಾದಾದ್ರೂ ಮಬ್ ನಲ್ಲಿ ತಬ್ಬಿಕೊಳ್ಳೋಕೆ ಹೋದ್ರೆ ಬಚಾವ್ ಆಗಿ ಬರೋಕೆ ಅವ್ರೇನು ರಾಜಕಾರಣಿಗಳೇ…..?
******   *******   *****
ನಮ್ಮ ರಾಜಕಾರಣಿಗಳಲ್ಲಿ ನೋಡಿದ್ರೆ, ಅವ್ರ ಲೈಫ್ ಸ್ಟೈಲ್ ಅವರ ಸಂಬಳಕ್ಕಿಂತಲೂ ಬಹಳ ಹೈಲೆವೆಲ್ ನಲ್ಲಿ ಗ್ರಾಫ್ ಹೋಗ್ತಾನೆ ಇರುತ್ತದೆ.  ಅಷ್ಟೇ ಅವರು ಆರೋಗ್ಯಕ್ಕೆ ನೀಡುವ ಕಾಳಜಿ ನಮ್ಮನ್ನು ದಂಗುಬಡಿಸುತ್ತದೆ. ಅವರಲ್ಲಿ ಬಡವರೇ  ಇಲ್ಲವೆನ್ನಬಹುದು.  ಹಿಂದೊಮ್ಮೆ ಕಂಡ ಪತ್ರಿಕಾ ವರದಿಯಂತೆ ಎಲ್ಲರೂ ಕರೋಡ್ ಪತಿಗಳೇ…!! ಅಧಿಕಾರದಲ್ಲಿದ್ದು ಏನೆಲ್ಲ ಆರೋಪಗಳೂ ಇರಿಸುಮುರಿಸುಗಳೂ ಹಾಗೂ ಎಲ್ಲಿಲ್ಲದ ಒತ್ತಡದ ನಡುವೆಯೂ “ಜನಸೇವೆ” ಮಾಡುವುದಕ್ಕೋಸ್ಕರ ಅವರ ಆರೋಗ್ಯ ಕಾಪಾಡ್ಕೋಳ್ಳೂದು ಬಹಳ ಕಷ್ಟವೇ ಅನ್ನಿ.  ಹಾಗೆ ನಡು ನಡುವೆಯೆ ಬೇಡವೆಂದರೂ ಬಳಿ ಬಂದು ಬೀಳುವ ಹಣದಲ್ಲಿ ಜಮೀನು, ಕಾರ್ಖಾನೆಗಳು, ಹೋಟೆಲ್‌ ಗಳೂ, ಬಿಲ್ಡಿಂಗ್‌ ಗಳು ಇತ್ಯಾದಿ ಹೇರಳವಾಗಿ ಆಸ್ತಿ ಪಾಸ್ತಿ  ತಮ್ಮವರಿಗೆ ತಮ್ಮ ಕುಟುಂಬಕ್ಕೆ ಮಾಡಿಕೊಂಡಮೇಲೆ,   ಅದನ್ನೆಲ್ಲ ಅನುಭವಿಸೋಕೆ ಒಳ್ಳೆ ಆರೋಗ್ಯ ಇರಲೇಬೇಕಲ್ವೇ….  ಪಾಪ1 ಅದೇ ಪದೇ ಪದೇ ಕೈಕೊಟ್ಟಾಗ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೋಗುವುದುಂಟು.  ಈಗೀಗಲಂತೂ ವಯಸ್ಸಾದ ಮುತ್ಸದ್ದಿಗಳು ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಪಂಚ ಕರ್ಮ ಇವುಗಳಿಗೆ ಮೊರೆ ಹೋಗುತ್ತಿದ್ದಾರೆ.  ಅದೂ ನಮ್ಮ ರಾಜ್ಯದ ವೈದ್ಯರ ವೈದ್ಯಕೀಯಕ್ಕಿಂತಲೂ ಪಕ್ಕದ ಕೇರಳಕ್ಕೇ,  ಇನ್ನೂ ಹೆಚ್ಚೆಂದರೆ ಹೊರದೇಶಕ್ಕೆ ಹಾರಿ ಹೋಗುವುದೂ ವಾಡಿಕೆಯಾಗಿಬಿಟ್ಟಿದೆ.  ಕೆಲವರಂತೂ ತಾವು ಸಚಿವರಾಗಿದ್ದ ಅವಧಿಯಲ್ಲೇ  ತಮ್ಮ ಆರೋಗ್ಯ ತಪಾಸಣೆ ಸರ್ಕಾರೀ ಖರ್ಚಿನಲ್ಲಿ ಮಾಡಿಸಿಕೊಂಡು ಜಾಣರಾಗಿಬಿಡುತ್ತಾರೆ. ಹಾಗೆ ಆರೋಗ್ಯವಾಗಿದ್ದು ಆರಾಮವಾಗಿದ್ದೂ ಅಧಿಕಾರದ ಸವಿ ಸವಿಯುವುದನ್ನು ಮಿಸ್ ಮಾಡಿಕೊಳ್ಳುವುದೇಕೇ…? ಮಾಜಿ ಮಂತ್ರಿ, ಶಾಸಕರಾದಮೇಲೆ ಅದೆಲ್ಲ ಎಷ್ಟರಮಟ್ಟಿಗೆ ಸಾಧ್ಯ ? ನಮ್ಮ ಸಿ.ಎಂ. ನೋಡಿ, ಕೇರಳದ ಕೊಟ್ಟಕಲ್ ನಲ್ಲಿ  ನಾಲ್ಕೈದು ದಿನ ಇದ್ದು  ಒಳ್ಳೆ ಮಸಾಜ್ ಮಾಡಿಸಿಕೊಂಡು ಬರ್ತಾರೆ!  ಇದೀಗ ಮಾರಿಷಸ್ ಗೆ ಕುಟುಂಬ ಸಮೇತ ಫರಾರಿ. ಯಾಕಂದ್ರೆ ಅಧಿಕಾರಾವಧಿ ಮುಗಿಯೋದು ಹತ್ತಿರವಾಗಿದೆಯಲ್ಲ, ಅಷ್ಟರೊಳಗೆ ವಿದೇಶದಲ್ಲಿ ಒಂದು ಸುತ್ತು ಮಜಾ ಉಡಾಯಿಸ್ಕೊಂಡು ಬರೋದು.  ಹಾಗೇನೆ ಮಾರಿಷಸ್ ಅಂದ್ರೆ ಇನ್ನೊಂದು ಸ್ವಿಸ್ ಅಂತಾರಲ್ಲ, ಅಲ್ಲೇ ತಮ್ಮ ಕಾಷ್ಟವ್ಯಸನಾರ್ಜಿತ ದುಡ್ಡನ್ನು ಜೋಪಾನವಾಗಿಸಿ ಬರೋದು.
ಅಲ್ಲ, ತಪ್ಪಾಯ್ತು ತಿದ್ದಿಕೋತೀವಿ ಅಂತಾನೇ ಇರ್ತಾರೆ! ಮತ್ತೆ ಮಬ್ಬಿನಲ್ಲಿ ತಬ್ಬಿಕೊತಾನೇ ಇರ್ತಾರಲ್ಲಾ…”

Follow

Get every new post delivered to your Inbox.