ಅನಂತ ಮೂರ್ತಿ ಅವ್ರು ಯಾವ ಪಂಥೀಯ…?
ಇತ್ತ ಎಡ ಪಂಥೀಯರನ್ನು ಎದುರು ಹಾಕಿಕೊಂಡು ಅತ್ತ ಬಲ ಬಂಥೀಯರನ್ನೂ ವಿರೋಧಿಸುವಂತೆ ನಾಟಕವಾಡುತ್ತಿರುವ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ಪೂರ್ವಾಗ್ರಹ ಪೀಡಿತರು. ಇಂತಹ ಒಬ್ಬ ಸಾಹಿತಿ ರಕ್ಷಣಾ ವಲಯದಲ್ಲಿ ನಿಂತು ಮಾತನಾಡುವುದಾದರೂ ಏಕೆ ಎಂದು ಹಿರಿಯ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ. ಅನಂತ ಮೂರ್ತಿ ಪತ್ರಿಕೆಯೊಂದರ ಸಾಪ್ತಾಹಿಕದಲ್ಲಿ ಬರೆದ ಲೇಖನದ (ಪ್ರ.ವಾಣಿ-26-06-2011) ಮೂಲಕ ಇತರೆ ಸಾಹಿತಿಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. …ದೊಡ್ಡ ಸಾಹಿತಿಯಾದ ಅನಂತ ಮೂರ್ತಿ ಅವರ ಮಾತಿಗೂ ಕೃತಿಗೂ ಸಂಬಂಧವಿಲ್ಲದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಇಂತಹ ಪೂರ್ವಾಗ್ರಹ ಪೀಡಿತರ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದೂ ಹೇಳಿದ್ದಾರೆ( ಕ.ಪ್ರ -28-06-2011).
ಅದೇ ಕ.ಪ್ರ ಪತ್ರಿಕೆಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖ್ರಪಾಟೀಲರೂ ಅನಂತ ಮೂರ್ತಿ ಎಡವೂ ಅಲ್ಲ ಬಲವೂ ಅಲ್ಲದ ನಡು ಪಂಥೀಯ ಎಂದಿದ್ದಾರೆ. (ನನಗನಿಸುತ್ತದೆ ಅವ್ರು ಅತಂತ್ರೀಯರೋ. ಎಂದು.). ಮುಂಚೆ ವೈದಿಕರು ಇತರರನ್ನು ಕಚ್ಚಾಟಕ್ಕೆ ಬಿಟ್ಟು ಮಜಾನೋಡಿ ಅನುಭವಿಸುತ್ತಿದ್ದರು. ಇದೀಗ ಅಂಥವರ ನಡುವೆಯೇ ಸಂಘರ್ಷ ಹುಟ್ಟಿಕೊಂಡಿದೆ ಎನ್ನುತ್ತಾರೆ ಪಾಟೀಲರು. ಆದರೇನು!
ವೈದಿಕರಾದ ಭೈರಪ್ಪನವರು ಈ ಅಹಮಿಕೆಯ ಮನುಷ್ಯ ಗೊಣಗಿಕೊಂಡರೆ ನನಗೇನು… ಎಂಬಂತೇ ತಮ್ಮ ಸಾತ್ವಿಕ ಮೌನದಿಂದ ಇದ್ದಾರೆ;ಯಾರೆಲ್ಲರನ್ನೂ ಈ ಬಗ್ಗೆ ಚಿಂತನಗೆ ಹಚ್ಚಿದ್ದಾರೆ.
ನಾನು ಯು.ಆರ್.ಅನಂತ ಮೂರ್ತಿಯವರ ಲೇಖನ ಓದಿದ್ದೇನೆ. ಈ ಲೇಖನದ ಉದ್ದಕ್ಕೂ ಅವರ ವಿಕೃತ ವಿಚಾರಗಳು ಮತ್ತು ವಿರೋಧಾಭಾಸಗಳು ಎಂತವ್ರನ್ನೂ ಗೊಂದಗೊಳಿಸುತ್ತವೆ; ಕೆಲವೊಮ್ಮೆ ಅಪಾಯಕಾರಿಯಾದ ಹೇಳಿಕೆಗಳೆನಿಸುತ್ತವೆ.
ಅವರ ಆ ” ಸೃಜನಶೀಲತೆಯ ಅಗ್ನಿ ದಿವ್ಯ” ಲೇಖನದ ಆರಂಭದಲ್ಲೇ ಹೀಗೆ ಹೇಳುತ್ತಾರೆ- ಭಾರತೀಯ ಕಾವ್ಯ ಮೀಮಾಂಸೆಯಲ್ಲಿ “ವಿಭಾವ” ಎಂಬ ಶಬ್ದವಿದೆ. ಭಾವವೊಂದು ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅಂದರೆ ಆ ಭಾವವನ್ನು ಧರಿಸಬಲ್ಲ ಒಂದು ಅಥವಾ ಅದನ್ನು ಹೊತ್ತು ಹೆರಬಲ್ಲ ಒಂದು ದೇಹದ ಅಗತ್ಯವಿದೆ- ಅದೇ ವಿಭಾವ.. ನಾವು ಎಲಿಯಟ್ ನಿಂದ ತಿಳಿದುಕೊಂಡ ಆಬ್ಜೆಕ್ಟಿವ್ ಕೊರಿಲೇಟಿವ್ ಕೂಡಾ ಇದೇ ವಿಭಾವ ಎನ್ನುತ್ತಾರೆ.
ಅವರ ಈ ಮಾತಿನ ಜಾಡನ್ನೇ ಹಿಡಿದು ಹೇಳುವುದಾದರೆ, ಆತ್ಮಕ್ಕೊಂದು ದೇಹದ ಅಗತ್ಯವಿರುವಂತೆಯೇ ಭಾವವೊಂದು ಉತ್ತಮ ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅದನ್ನು ಹೊತ್ತು ಹೊರಹಾಕಬಲ್ಲ ದೈವಿಕ ಭಾವದ ( ದೇಹವುಳ್ಳ ತಾತ್ವಿಕ ನಿರೀಕ್ಷಣಾಭಾವದ) ಸಾಹಿತಿಯ ಅಗತ್ಯವಿದೆ ಎನ್ನುತ್ತದೆ. ಇದಕ್ಕೆ ಅನಂತಮೂರ್ತಿಯವರು ಏನೆನ್ನುತ್ತಾರೋ…
ಬರಗೂರರು ಹೇಳುವಂತೇ ಅನಂತ ಮೂರ್ತಿ ಅವರ ಮಾತು ನಡವಳಿಕೆಗಳು ಒಂದಕ್ಕೊಂದು ತಾಳೆಯಾಗುವುದೇ ಇಲ್ಲ ಎನ್ನುವುದಕ್ಕೇ ಅದೇ ಲೇಖನದ ಇನ್ನೊಂದು ಸಾಲು ಹೀಗಿದೆ ನೋಡಿ- “ಭಾರತೀಯ ಸಿನಿಮಾ ಇರುವ ಹಾಗೆಯೇ ಕನ್ನಡ ಸಿನಿಮಾ ಅನ್ನುವುದೂ ಒಂದಿದೆ. ಇದು ಕನ್ನಡಕ್ಕೆ ತನ್ನದೇ ಆದ ಕೆಲವು ಕೊಡುಗೆಗಳನ್ನು ಕೊಟ್ಟಿದೆ”
ಭಾರತೀಯ ಸಿನಿಮಾ ಇರುವ ಹಾಗೆಯೇ… ಹಾಗೆಂದರೇನು? ಕನ್ನಡ ಸಿನಿಮಾಗಳೆಲ್ಲ ಭಾರತೀಯ ಸಿನಿಮಾ ಅಲ್ಲವೆಂದೇ…?
ದೊಡ್ಡ ಸ್ಥಾನದಲ್ಲಿರುವ ಸಾಹಿತಿಯಾಗಿ ಜ್ಞಾನವೃದ್ಧರೂ ಆಗಿರುವ ಅನಂತ ಮೂರ್ತಿಗಳು ವಸ್ತು ನಿಷ್ಠೆಯಿಂದ ವಿಮರ್ಶೆ ಮತ್ತು ಪರಾಮರ್ಶೆ ಮಾಡಿಕೊಳ್ಳದೇ ಪೂರ್ವಾಗ್ರಹ ಪೀಡಿತರಾಗಿ, ದೇಶವಿದೇಶಗಳಲ್ಲಿ ಅಪಾರ ಜನಮನ್ನಣೆಗಳಿಸಿರುವ ಬೈರಪ್ಪನವರನ್ನು ರಾಹುಗ್ರಸ್ತರೆಂದು ಇತರರನ್ನು ಕೇತು ಗ್ರಸ್ತರೆಂದು ಹೇಳುತ್ತ , ತಾವು ಕನ್ನಡದ ಪ್ರಗತಿಪರ ಕಾಳಜಿಯಿಂದ ದೂರವಾದ ಬುದ್ಧಿಗೂ ಮುಪ್ಪಡರಿದಂತೇ ವಿಕೃತ ಹೇಳಿಕೆಯನ್ನು ನೀಡುವುದೂ, ನಾಡಿನ ಹಿರಿಯ ಸಾಹಿತಿಗಳೂ ಹಾಗೂ ಜನಸಾಮಾನ್ಯರಿಂದಲೂ ಆಗಾಗ್ಗೆ ಬೈಯಿಸಿಕೊಳ್ಳುವ ಶಾಪಗ್ರಸ್ತರಂತೆ ಕಾಣುವುದು ಅವರಿಗೆ, ಅವರು ಪಡೆದುಕೊಂಡಿರುವ ಸ್ಥಾನಕ್ಕೆ ಶೋಭೆಯಲ್ಲ.
Posted on June 28, 2011, in ಚಿಂತನೆಗಳು, ಸುದ್ದಿ ಸ್ವಾರಸ್ಯ, ಹೇಳಲೇ ಬೇಕೆನಿಸಿದ್ದು..., Blogs. Bookmark the permalink. Leave a Comment.





Leave a Comment
Comments (0)