“ಮೇಲೇರಿದಾತ ಸಣ್ಣವನಿರಲೇಬೇಕು…” ಎಂಬ ಹಿರಿಯ ಕವಿಗಳ ಮಾತನ್ನು ಮರೆತವರು…
ಮೂಡುವನು ರವಿ ಮೂಡುವನು
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು
ಕುಣಿದಾಡುವನು
ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಮೇಲೇರಿದಾತ ಸಣ್ಣವನಿರಲೇಬೇಕೆಂಬ ಮಾತನು ಸಾರುವನು.
ಇದು ನಾನು ಚಿಕ್ಕವನಿದ್ದಾಗ ಪಠ್ಯ ಪುಸ್ತಕದಲ್ಲಿ ಓದಿದ ಪದ್ಯ. ಬಹುಶಃ ನನ್ನ ನೆನಪಿನಂತೆ ಹಿರಿಯ ಕವಿ ಪಂಚೆ ಮಂಗೇಶ ರಾಯರು ಬರೆದ ಪದ್ಯವದು. ತೀರ ಸರಳವಾಗಿದ್ದು ಹಾಗೂ ಅಬಾಲವೃದ್ಧರಾದಿಯಾಗಿ ಓದಿದರೆ ಮರೆಯಲಾಗದ ಸಾಲುಗಳಿರುವ ಪದ್ಯವಿದು. ಈ ಪದ್ಯದ ಸಾಲುಗಳು ಇಂದಿಗೆ ನಮ್ಮ ಅತ್ಯಂತ ಜನಪ್ರಿಯ ಸಾಹಿತಿ ಭೈರಪ್ಪನವರಿಗೆ ಅವರ ಮೇರು ವ್ಯಕ್ತಿತ್ವ ಮತ್ತು ಘನತೆಗೆ ತಕ್ಕಂತೆ ಕಲಶಪ್ರಾಯದಂತಿವೆ.
ಕೆಲ ಘನ ವಿದ್ವಾಂಸರೂ ಇರುತ್ತಾರೆ “ಮೇಲೇರಿದಾತ ಸಣ್ಣವನಿರಲೇಬೇಕು…” ಎಂಬ ಹಿರಿಯ ಕವಿಗಳ ಮಾತನ್ನು ಮರೆತು ತಮ್ಮ ಸಣ್ಣತನ, ಸಣ್ಣ ಮನವನ್ನು ತರೆದು ತೋರುತ್ತಾರೆ. ತಮ್ಮ ವ್ಯಕ್ತಿತ್ವ ಘನತೆ ತಾವೇ ಪಡಕೊಂಡಿರುವ ಮಾನಸಮ್ಮಾನಗಳಿಗೂ ಸೊಪ್ಪು ಹಾಕದಂಥ ಮಹಾಜ್ಞಾನಕ್ಕೆ ಅಧಿಪತಿಗಳಿವರು!
ಅಂಥವರಲ್ಲಿ ಪ್ರಾಯಶಃ ಮೊಟ್ಟ ಮೊದಲಿಗೆ ಎತ್ತರಕ್ಕೆ ಕಾಣುವವರೆಂದರೆ ಕನ್ನಡ ಜ್ಞಾನಪೀಠಾಧಿಪತಿ ಯು.ಆರ್. ಅನಂತಮೂರ್ತಿಯವರು. ನನಗೆ ನೆನಪಿರುವಂತೆ ಅದು ಇಂದಿರಾಗಾಂಧಿ ಎಮರ್ಜನ್ಸಿ ಘೋಷಸಿದ್ದ ಕಾಲ. ಆಗ ಶಿವಮೊಗ್ಗಾದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಎಸ್.ವಿ.ರಂಗಣ್ಣನವರು ಆ ಸಮ್ಮೇಳನಾಧ್ಯಕ್ಷರಾಗಿದ್ದರು. ಸಮ್ಮೇಳನಕ್ಕೆ ಗೋಪಾಲಕೃಷ್ಣ ಅಡಿಗರನ್ನು, ಅನಂತ ಮೂರ್ತಿಯವರನ್ನೋ ಅಧ್ಯಕ್ಷರನ್ನಾಗಿ ಅರಿಸಲಿಲ್ಲವೆಂಬ ಆಕ್ರೋಶವೋ ಏನೋ… ಅಂದು “ಸಾಹಿತ್ಯ ಸಂಜೆ” ಎಂಬ ಕಾರ್ಯಕ್ರಮವೊಂದನ್ನು ಕಸ್ತೂರಬಾ ಕಾಲೇಜಿನ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಡಿಗರು ತಮ್ಮ ಸಾತ್ವಿಕ ಕೋಪವನ್ನು ಪದರ್ಶಿಸಿ ಅಂದೇನು ಸಾಹಿತ್ಯಕ್ಕೇ ಸಂಜೆಯಾಗಿದೇಯೋ.. ಎಂದು ಉದ್ದಾರವೆತ್ತಿ ತಮ್ಮ ಘನತೆ ಉಳಿಸಿಕೊಂಡು ಭಾಷಣ ಮಾಡಿದರೆ, ಅದೇ ವೇದಿಕೆಯ ಮೇಲಿದ್ದ ಯು.ಆರ್.ಅನಂತ ಮೂರ್ತಿಯವರು ಎದ್ದು ಭಾಷಣ ಮಾಡುವಾಗ ತಮ್ಮ ತಾಮಸ ಕೋಪವನ್ನು ತಾವು ಇಂಗ್ಲೀಷ್ ಬಲ್ಲ ಪ್ರೊಫೆಸರರೆಂಬ ಆಟಾಟೋಪದಿಂದ ತಮ್ಮೊಳಗೇ ಚಿಗರೊಡೆಯುತ್ತಿದ್ದ ಅಹಂಕಾರದಿಂದ ಭಾಷಣ ಬಿಗಿದಿದ್ದರು…ಜನರೂ ಅಂದಿನ ಅನಂತ ಮೂರ್ತಿ ಹೇಳುವುದೇ ನಿಜವೇನೋ ಎಂಬಂತೆ ಮಂತ್ರ ಮುಗ್ದರಾಗಿದ್ದರು. ಅದೇ ಅನಂತ ಮೂರ್ತಿ ಇಂದಿಗೆ ನಮ್ಮ ಜನ ಮುಂದುವರೆದಿದ್ದಾರೆ, ಎಂಬುದನ್ನು ಮರೆತಿದ್ದಾರೆ. ತಾವು ಪಡಕೊಂಡಿರು ಸ್ಥಾನದಿಂದ ತಾವು ಏನು ಹೇಳಿದರೂ ಕೇಳುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಇವರಂಥ ಜ್ಞಾನಿಗಳು ಬುದ್ದಿ (ಬದ್ಧ) ಜೀವಿಗಳನ್ನು ಬೆಂಬಲಿಸುವ ಪ್ರೊಫೆಸರ್ ಜಿ.ಕೆ.ಗೋವಿಂದರಾವ್ ಅವರಂಥವರೂ ಇದ್ದಾರೆ! ಇವರನ್ನು ಬೆಂಬಲಿಸುವ ಶಿಷ್ಯರೂ ಮತ್ತು ಇವರ ವಿಚಾರಗಳನ್ನು ಪ್ರಕಟಿಸುವ ಪತ್ರಿಕೆಗಳೂ ಇವೆಯಲ್ಲ!
ಜೀವನದ ಸಂಜೆಯಲ್ಲಿ ಶಾಂತರಾಗಿ ದ್ದುಕೊಂಡು ತಮ್ಮ ಸಮಚಿತ್ತತೆಯಿಂದ ಎಲ್ಲರನ್ನೂ ಏನೆಲ್ಲವನ್ನು ತೂಗಿ ನೋಡುವುದನ್ನು ಬಿಟ್ಟು ತಾವು ಜ್ಞಾನಪೀಠಾಧಿಪತಿ ಜ್ಞಾನಕ್ಕೇ ಅಧಿಪತಿ ಎಂಬ ಭೃಗು ಮಹರ್ಷಿಯ ಅಹಂಕಾರವನ್ನು ಮರೆಯುತ್ತಲೇ ಬಂದಿದ್ದಾರೆ. ಇವರ ಅಂಗಾಲಿನಲ್ಲಿ ಅದೇನು ಅಹಂಮಿಕೆಯ ಕಣ್ಣೇನಾದರೂ ಇದ್ದರೆ ಅದನ್ನು ಆ ನಮ್ಮ ಸಾಕ್ಷಾತ್ ವಿಷ್ಣುವೇ ಅವತರಿಸಿ ಬಂದು ಉಪಾಯದಿಂದ ಚಿವುಟಿ ಹಾಕಬೇಕಷ್ಟೇ…. ಅವನೂ ಕೂಡ ಇವರ ಹತ್ತಿರಕ್ಕೆ ಸುಳಿಯಲಾರನೆನಿಸತ್ತದೆ- ಯಾಕೇ ಅಂತಿರೇನು? ಹಲವು ವರ್ಷಗಳ ಹಿಂದೇ ಇದೇ ಅನಂತ ಮೂರ್ತಿಯವರು ತರಂಗ ಪತ್ರಿಕೆಯಲ್ಲಿ ತಮ್ಮ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ- …ಬುದ್ಧ ಚಾರಿತ್ರಿಕ ವ್ಯಕ್ತಿ, ಮಹಮ್ಮದ್ ಚಾರಿತ್ರಿಕ ವ್ಯಕ್ತಿ… ರಾಮ ಅಲ್ಲ.. ರಾಮ ಹುಟ್ಟಿದ್ದು ಅಯ್ಯೋಧ್ಯೆಯಲ್ಲಲ್ಲ; ಗೋಡ್ಸೆ ಗುಂಡಿಕ್ಕಿ ಕೊಂದಾಗ . ಗಾಂಧೀಜಿಯವರ ಬಾಯಲ್ಲಿ….” ಎಂದು ವ್ಯಂಗ್ಯವಾಡಿದ್ದಾರೆ; ಅನಂತಮೂರ್ತಿಗಳು! ಎಷ್ಟೇ ಆಗಲಿ ಇವರು ನಮ್ಮ “ಸಂಸ್ಕಾರ…. ಗಳನ್ನು ಅಲ್ಲಗೆಳೆದು ಪ್ರಸಿದ್ಧಿಪಡೆದವರಲ್ಲವೇ… ಹಾಗೇ ನಮ್ಮ ಏನೆಲ್ಲ ಆಚಾರ ವಿಚಾರಗಳನ್ನೂ ಅಲ್ಲಗೆಳೆಯುತ್ತಲೇ ವಿವಾದಗಳನ್ನು ಹುಟ್ಟು ಹಾಕುತ್ತಲೇ ತಾವು ಇನ್ನೂ ಇನ್ನೂ ಎತ್ತರಕ್ಕೇರುತ್ತೇನೆಂಬ ಭ್ರಮೆಯಲ್ಲಿರುವಂತಿದೆ. ಯಾಕೆಂದರೆ, ಇತ್ತೀಚೆಗೆ ಬಾಬಾ ರಾಮ್ ದೇವ್ ಸತ್ಯಗ್ರಹಕ್ಕೆ ಸಂಬಂಧಿಸಿದಂತೆ ವಿಜಯ ಕರ್ನಾಟಕದಲ್ಲಿ ಇವರ ಲೇಖನ ನೋಡಿದಾಗ ಗಡ್ಡಬಿಟ್ಟು ಭಾವೋದ್ವೇಗದಿಂದ ಬಡಬಡಿಸುವ ಕಾವಿ ತೊಟ್ಟ ಬಾಬಾಗಿಂತಲೂ (ಸ್ಟೈಲ್ ಆಗಿ ಬಿಳಿಗಡ್ಡ ಪೋಷಿಸಿಕೊಂಡು) ತಾವೇ ಮಹಾನ್ ವಿಚಾರವಾದಿಗಳು ಮೇಧಾವಿಗಳೆಂದು ಮರೆವಂಥವರಿಂದಲೇ ನಮಗೆ ಅಪಾಯವಿದೆ ಅನ್ನಿಸದೆಯೂ ಇರಲಿಲ್ಲ. ಈ ಬಗ್ಗೆ ನನ್ನ ಬ್ಲಾಗ್ ಕೊಂಡಿ ನೋಡಿ..
…ಅಲ್ಲಾ ಸೂರ್ಯನೂ ಅಸ್ತಂಗತನಾಗಲೇ ಬೇಕು. ಅವನಿಗೋ ಇನ್ನೊಂದು ಮತ್ತೊಂದು ಮಗದೊಂದು ಬೆಳಗು ಇದೆ ನಮಗೋ ಜೀವಿತದ ಅಂತ್ಯಕಂಡರೆ ಇನ್ನೊಂದು ಬೆಳಗೆಲ್ಲಿ…? ಅನಂತಮೂರ್ತಿಯವರ ಬಗ್ಗೆ ಈ ದಿನ ಕನ್ನಡ ಪ್ರಭದಲ್ಲಿ ಚೈತನ್ಯ ಹೆಗಡೆಯವರು “ಬಹಳ ಚೆನ್ನಾಗಿ ಹಾಡಿ ಹೊಗಳಿದ್ದಾರೆ” ಖಂಡಿತ ನೀವೂ ಓದಿರುತ್ತೀರಿ; ಇಲ್ಲವಾದರೆ ಓದಿ.. ಭೈರಪ್ಪನವರ ಸುಪ್ರಸಿದ್ಧಿಯನ್ನು ಕಂಡು ಕರುಬುವುದೇಕೋ ಜ್ಞಾನಪೀಠಿ ಅನಂತಮೂರ್ತಿ, ಇವರು ಎಷ್ಟ್ ಚೆನ್ನಾಗಿ ಅರ್ಥವಾಗ್ತಿದಾರೆ.. ಎನ್ನುತ್ತಾರೆ ಚೈತನ್ಯ ಹೆಗಡೆ (ಕ.ಪ್ರ. 22-06-11). ಅದೇ ಪತ್ರಿಕೆಯಲ್ಲಿ ವಾಚಕರೊಬ್ಬರು ಹೀಗೆ ಹೇಳುತ್ತಾರೆ; ” ಗಡ್ಡ ಬಿಡುವ ಬದಲು ಈತ ತನ್ನ ಅಹಂಕಾರವನ್ನು ಬಿಟ್ರೆ ಒಳ್ಳಯದು…”
Posted on June 22, 2011, in ರಾಜಕೀಯ, ಸುದ್ದಿ ಸ್ವಾರಸ್ಯ, ಹೇಳಲೇ ಬೇಕೆನಿಸಿದ್ದು.... Bookmark the permalink. 2 Comments.





iMtha budhijeeviglinda enu prayojana?
ಪ್ರತಿಕ್ರಿಯೆಗೆ ಧನ್ಯವಾದಗಳು