ಕವನಗಳು
ಕಾರ್ಗಿಲ್ ಕಲಿಯೇ ನೀನು!
ನಿರುತ ಜಾಗೃತನಾಗು ನಿರುತ ಜಾಗೃತನಾಗು
ಗಡಿ ಕಾಯ್ವ ಧೀರ, ಏಳು ಎದ್ದೇಳು ಭಾರತದ ವೀರ!
ಅಗೋ ಹಿಮಗಿರಿಯ ಮಂಜಿನಾ ಮಬ್ಬಿನಲಿ
ಕೊಬ್ಬಿರುವ ಪಾತಕಿಯ ವೈಚಿತ್ರ್ಯ ನೋಡು
ಆ ಅರಿಯ ತಲೆ ತರಿದು ತಾಂಡವವ ನೀನಾಡು
ಪ್ರಳಯ ರುದ್ರನ ವರ ಪುತ್ರ ನೀನು.
ನಿನಗೆಂದೂ ಇದೆ ನೋಡು ಅರ್ಜುನಗೆ
ಅನುಜನಾದವನ ಸತತ ಪ್ರೀತಿ
ಆ ದೇವನ ಶಾಂತಿ ಸಂಧಾನ ರೀತಿ
ಏಳು, ಎದ್ದೇಳು ರಣ ಕಹಳೆ ಊದು.
ನಿನೆಂದೂ ಸ್ಮರಿಸುತಿರು ಚಕ್ರ ಹಿಡಿಯದೇ
ಯೋಧನಿಗೆ ತಾನಾದ ಪ್ರೇರಣೆಯ ಶಕ್ತಿ
ಧರ್ಮ ಸಂಸ್ಥಾಪನೆಗೆ ಸಾರಥಿ ಅವನ ನೀತಿ
ಏಳು, ಎದ್ದೇಳು ಪರಮಾತ್ಮನಾ ಆಪ್ತ ನೀನು.
ನಿರುತ ಜಾಗೃತನಾಗು
ನಿರುತ ಜಾಗೃತನಾಗು
ಕಾರ್ಗಿಲ್ ಕಲಿಯೇ ನಿನು;
ಜಗ್ಗದಿರು ಕುಗ್ಗದಿರು ನಡೆ ಮುಂದೆ ನೀನು!.
- ಎಚ್.ಶಿವರಾಂ
(ಕಾರ್ಗಿಲ್ ಯುದ್ದ ನಡೆದ ಆ ದಿನಗಳಲ್ಲಿ ನಾನು ಬರೆದ ಕವನ
-15-08-1999. ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ)
ಕಾರ್ಗಿಲ್ ಯುದ್ಧ ನಡೆದು ಹನ್ನೆರಡು ವರ್ಷಗಳು ಕಳೆದುಹೋದವು. ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ನಲ್ಲಿ ವಿಜಯ ಪತಾಕೆ ಹಾರಿಸಿದ ದಿನವನ್ನು ಆಚರಿಸುತ್ತೇವೆ. ವಿಕ್ರಮ್ ಬಾತ್ರಾ, ಅನೂಜ್ ನಯ್ಯರ್, ಸೌರಬ್ ಕಾಲಿಯಾ ರಂತಹ 527 ವೀರ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶ ಕಾಯುತ್ತಿರುವ ಇಂತಹ ಸೈನಿಕರಿಂದಾಗಿಯೇ ನಾವು ಬೆಚ್ಚನೆಯ ಬದುಕು ಸಾಗಿಸುತ್ತಿದ್ದೇವೆ. ನೆಮ್ಮದಿಯ ನಿದ್ರೆಗೆ ಜಾರುತ್ತಿದ್ದೇವೆ. ಕಾರ್ಗಿಲ್ ದಿನವಾದ ಜುಲೈ 26-07-11 ರಂದು ಕನ್ನಡ ಪ್ರಭ ದಿನ ಪತ್ರಿಕೆ ಯಾರೂ ಮರೆಯಲಾಗದಂತ ಚಿರಸ್ಮರಣೀಯ ಲೇಖನವನ್ನು ಪ್ರಕಟಿಸಿ- ಕಾರ್ಗಿಲ್ ಯುದ್ದದಲ್ಲಿ ಮಡಿದ ಸೈನಿಕರಿಗೆ ನಮ್ಮ ಶ್ರದ್ಧಾಂಜಲಿ ಅರ್ಪಿಸಿದೆ. ಕನ್ನಡ ಪ್ರಭ ಪತ್ರಿಕೆಯ ಬಳಗಕ್ಕೆ ಧನ್ಯವಾದಗಳು.
ದೀಪಾವಳಿ ಹಬ್ಬ
ದೀಪಾಲಂಕಾರ ಲೋಕಶೃಂಗಾರ
ಬೆಳಕು ಚೆಲ್ಲಿದ ಬಾಳ ವಿಹಾರ
ಸಂಭ್ರಮ ಸ್ಫುರಿಸುವ ಹ಼ರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.
ರಕ್ಕಸಲೀಲೆಯ ದಮನಗೊಳಿದ ಧಾತ್ರಿ
ಕತ್ತಲೆ ಕಳೆದು ಜ್ಞಾನ ಉದಿಸಿದ ಜ್ಯೋತಿ
ಹೊಸಬೆಳಕಲಿ ಹೊಸತಿರುವು ನೀಡಿದೆ ಕಾಂತಿ
ಬದುಕಿಗೆ ಸಂತಸ ಚಿಮ್ಮುವ ಹರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.
ಚಟಪಟ ಸಿಡಿಯುತ ಹೊಸ ಹೊಸ ಬಿರಿಸು ಬಾಣಗಳು
ಎಳೆಯರ ಕಿಲಕಿಲ ಕುಣಿಸುವ ಹಿರಿಯರ ತಣಿಸುವ
ಮನೆ ಮನೆ ಮನಗಳ ಹಗುರಗೊಳಿಸುವ ರಾತ್ರಿ
ಮತ್ತೆ ನಾಳೆಗೆ ನವಶಕ್ತಿ ತುಂಬುವ ಹರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.
ಹೃದಯ ಹೃದಯಗಳ ನಲಿಸಿ ಬೆಸೆಯುವ ಪ್ರೀತಿ
ಹೊಸ ಗೆಲುವಲಿ ಹೊಸ ದಾರಿ ತೋರುವ ದೀಪ್ತಿ
ನವೋದಯವೆ ತೊಲಗಿಸುವುದೆಲ್ಲರ ಭ್ರಾಂತಿ
ಜೀವಕೆ ಚೇತನ ತುಂಬುವ ಹ಼ರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.
-ಎಚ್.ಶಿವರಾಂ ಬೆಂಗಳೂರು
ರಾಮನವಮಿ ಹಬ್ಬ
ಅದೋ ಯುಗಾದಿ ಬಂದು ಹೊಸ ಹರುಷ
ಚೆಲ್ಲಿ ಹೋಯಿತೆಂದರೆ ಸಾಕು; ಅದರ ಬೆನ್ನಲ್ಲೇ
ಬರುವ ರಾಮನವಮಿಯ ಹೂವು ದವನಗಳೇ
ಎಲ್ಲ ಮನಗಳಲಿ ತುಂಬಿ ಘಮಘಮಿಸುವ ವಾಸನೆ!
ಆಗ ರಾಜಾಜಿ ನಗರದ ರಾಮ ಮಂದಿರಕೋ ಹೊಸರಂಗು
ಎಣೆಯಿಲ್ಲದುದ್ದ ಸರತಿ ಸಾಲು ರಾಮಭಕ್ತ ಹನುಮನ ಬಾಲವು
ನೀರೆಯರೆಲ್ಲ್ರ ಉಡಿ ತುಂಬಿದ ನಡೆಯಲಿ ಬಳುಕುವ ನೋಟ
ಹೊಮ್ಮುಸುವುದು; ನಮ್ಮ ಸಂಸ್ಕೃತಿ ಸಿಂಧೂ ಗಂಗಾ ಜಲ!
ಗುಡಿಯ ಒಳಗೆ ಶ್ರೀರಾಮಚಂದಿರನ ನೋಟವಂತೂ
ಬಲು ಸುಂದರ ಮನೋಹರ; ಯಾರೂ ಮರೆಯದಂತ
ನಿತ್ಯ ಸಂಗೀತೋತ್ಸವ ಸಂಭ್ರಮ ಸಡಗರವೋ ಸಡಗರ!
ಹೀಗೆ ಮತ್ತೆ ವರುಷ ಬಂದು ವರುಷ ಕಳೆಯೆ
ಹೊಸ ಹರುಷ, ಹುರುಪನೆಲ್ಲ ಎದೆಗಳಲಿ ತಂಬಿದೆ
ಹೊಸ ಹೊಸ ಭಾವಗಳನೆಲ್ಲ ಅರಸುತ ನಿಂತಿದೆ!
ಯಾಕೆ ಬಂತೊ ಈ ಹಬ್ಬ! ಎಲ್ಲಕೂ ರೇಟುಗಳೆ ಜಾಸ್ತಿ
ಒಳಗೇ ಧುಮುಗುಟ್ಟುವುದೇ ಎಲ್ಲಿ ರೀತಿ ನೀತಿ?
ಬೇಡ ಬೇಡ, ನಮ್ಮ ಹೃದಯಗಳಿಗೇಕೆ ಏಟು ಶಾಸ್ತಿ
ಮನೆ ಮನಗಳು ಖಾಲಿ ಆಗದಿರಲಿ ನಾಸ್ತಿ!
ಈ ವಿಚಿತ್ರ ಪ್ರಪಂಚ ನಮ್ಮದೇ ಇಲ್ಲೆ ನಮ್ಮ ಬಾಳ್ವೆಯು
ಈ ವ್ಯವಸ್ಥೆಯಲಿ ದೋಷ ದೂರುಗಳೇನೆ ಇರಲಿ
ಇದ್ದರಿರಲಿ ಗಣಿತ ಗುಣಿತ ಏರಿಳಿತಗಳೆಲ್ಲವೂ.
ಹಬ್ಬ! ಬಂದಿದೆ ಹಬ್ಬ, ರಾಮನವಮಿ ಹಬ್ಬ
ನಿತ್ಯಸತ್ಯ ಪ್ರತಿಪಾದಕ ಶ್ರೀರಾಮನ ಹಬ್ಬ!
ಅವನ ನಾಮಸ್ಮರಣೆಯಲಿದೆ ಇಲ್ಲೆ ನಮಗೆಲ್ಲವೂ
ಅಗೋ ನಂಬಿನಡೆವ ಎಷ್ಟೋ ಭಕುತರ ಕಾಣಿರೇಕೆ…
ಸುಮ್ಮನೇಕೆ ಮೂಕವಿಸ್ಮಿತರಾಗಿ ಉಳಿವಿರೇಕೆ…
ಸವಿಯಿರಿ ಕೋಸುಂಬರಿ ಪಾನಕ; ಅದೇ ಬದುಕಿಗೆ
ಹೊಸ ಭಾವ ಬಂಧಗಳ ರಸಪಾಕ.
ನೀನು ಅದೆಷ್ಟು ಅಗಮ್ಯ..!
ಎಂದಿಗೂ ಕಾಡುವ ಮರ್ಕಟ ಮೃಗ
ಇಲ್ಲಿದ್ದರೆ ಅಲ್ಲಿಲ್ಲ…ಅಲ್ಲಿ ಇನ್ನೆಲ್ಲೊ ಕಚಗುಳಿ
ಇಟ್ಟು ಬಿಟ್ಟೂ ಬಿಡದ ಧಾಳಿ ಬಿರುಗಾಳಿ….
ಹಾಗೊಮ್ಮೆ ಹುಡುಕಾಟ ತಡಕಾಟ
ಅಲ್ಲೇ ಕಂಡೂ ಕಾಣದ ತುಡಿತ ತವಕ…
ಎಲ್ಲ ಒಳಗೊಂಡು ಅದನ್ನನಭವಿಸಿ
ಅಪ್ಪಿ-ಒಪ್ಪಿಸಿಕೊಳ್ಳುವ ಖುಷಿ!
ಪ್ರಕೃತಿ ಸೆಳೆತವೋ ಸೌಂದರ್ಯ
ಮೋಹಕವೋ ಮಾರುಹೋಗುವುದೇ
ನಿಜ,ಸಹಜ ಮಜವೂ ಮೃದು ಮಧುರಾಲಾಪ
ಕಡೆಗೇಕೋ ಉದ್ವೇಗ ಅಬ್ಬರ ಭರ್ರನೆ ನಿರಭ್ರ
ಎಲ್ಲವೂ ಇಳಿದ ಮೇಲೆ ಇಲ್ಲ ಇನ್ನಿಲ್ಲವೇನೂ..
ಸುಳಿಯೊಳಗೇ ಜುಳು ಜುಳು ಹರಿದು ಹೋದರೂ
ಸತ್ತಂತೇ ಆದರೂ ಆಗದೇ ಮರುಕಳಿಸುವ
ಬೆಳಗಿನ ಬೆಳಕಿನಲಿ ಮೈಯಲ್ಲ ಚುರುಕು
ಅದೋ ಜಗವನ್ನೇ ಜಯಿಸಿ ಹೀರಿದಂಥ
ಉತ್ಸಾಹ…..ಹಾಯ್ ಜೀವ ಜೀವವೇ
ಮತ್ತೆ ಈ ಜಡ ಚೇತನಗೊಳಿಸವ
ನೀ ಅದೆಷ್ಟು ರಮ್ಯ ಕಡೆಗೊಮ್ಮೆ ಅಗಮ್ಯ…!
*****
ನಾವು ನಗುವ ಹಾಗೆ…..
ಧನಿವಾಹಿನಿ ಇಲ್ಲಿದೆ ಕ್ಲಿಕ್ಕಿಸಿ -







Leave a Comment
Comments (0)